ಮಾಧ್ಯಮ ವಿಶ್ಲೇಷಕ / ಸಾಹಿತಿ / ಅಂಕಣಕಾರ
ಲೇಖಕ, ಅಂಕಣಕಾರ, ಮಾಧ್ಯಮ ವಿಶ್ಲೇಷಕ, ಹವ್ಯಾಸಿ ಅಭಿವೃದ್ಧಿ ಪತ್ರಕರ್ತ ಹಾಗೂ ಸಂಘಟಕ ರಾಗಿ ಕಳೆದ 32 ವರ್ಷಗಳಿಂದ ಸೇವೆ.ಸಲ್ಲಿಸುತ್ತಿದ್ದಾರೆ. ಪತ್ರಿಕಾ ಲೋಕದ ಜೊತೆಗೆ ಉತ್ತಮ ಲೇಖಕರೂ ಆಗಿರುವ ಅವರು ಪತ್ರಿಕೋದ್ಯಮದ ಒಳಗೊಂಡಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇದುವರೆಗೂ 19 ಕೃತಿಗಳನ್ನು ಬರೆದಿದ್ದಾರೆ. 15.02.2023ರಂದು ನಡೆದ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಉತ್ತಮ ಸಂಘಟಕರು, ವೈಚಾರಿಕ ಚಿಂತಕರು ಮತ್ತು ಪ್ರಗತಿಪರ ವಿಚಾರಧಾರೆಯುಳ್ಳ ಡಾ.ಅಮ್ಮಸಂದ್ರ ಸುರೇಶ್ ಪ್ರಸ್ತುತ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಮತ್ತು ಸಂಘಟನೆ ಎರಡರಲ್ಲೂ ತೊಡಗಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ವೇದಿಕೆಯ ಮಾಧ್ಯಮ ಸಲಹೆಗಾರರಾಗಿ, ಕಲ್ಪತರು ಚಾರಿಟಬಲ್ ಟ್ರಸ್ಟ್ ಮತ್ತು ನೆರಳು ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾಗಿ, ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ರಾಜ್ಯ ಮಟ್ಟದ ಉದಯಕಾಲ ದಿನಪತ್ರಿಕೆಯಲ್ಲಿ ಅವರು ಬರೆಯುತ್ತಿರುವ “ತಿರುಗಾಟ” ಅಂಕಣ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಬಾಳಿನಲ್ಲಿ ಹೊಸ ಬೆಳಕನ್ನು ತರುವಲ್ಲಿ ಯಶಸ್ವಿಯಾಗಿದೆ. ಕೃಷಿಯ ಕುರಿತು ಉದಯಕಾಲ ದಿನಪತ್ರಿಕೆಯಲ್ಲಿ ಕೃಷಿ-ಖುಷಿ ಅಂಕಣವನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಉದಯಕಾಲ, ವಾರ್ತಾಭಾರತಿ ಸೇರಿದಂತೆ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ವೈಚಾರಿಕ ಮತ್ತು ಪ್ರಗತಿಪರ ಲೇಖನ ಮತ್ತು ಅಂಕಣಗಳನ್ನು ಬರೆಯುತ್ತಿದ್ದಾರೆ.